Showing posts with label Homa. Show all posts
Showing posts with label Homa. Show all posts

Thursday 23 February 2017

ಹೋಮ- ಹವನಗಳ ಮಹತ್ವ...

ಹೋಮ- ಹವನಗಳ ಮಹತ್ವ...

ನಮ್ಮ ಕೆಲವು ಬುದ್ದಿಜೀವಿಗಳು ಹೋಮ- ಹವನ- ಯಜ್ಞಗಳನ್ನು ಮಾಡುವುದು ವ್ಯರ್ಥ‌ ಆ ಹಣವನ್ನು ಬಡವರಿಗೆ ದಾನ ಮಾಡ ಬೇಕೆಂದು ಹೇಳುತ್ತಾರೆ. ಬಡವರಿಗೆ ದಾನ ಮಾಡುವ ಉದ್ದೇಶವಿದ್ದರೆ ಅದನ್ನು ಮಾಡೋಣ. ಅದಕ್ಕಾಗಿ ಹೋಮ-ಹವನಗಳನ್ನು ನಿಷೇಧಿಸಿ ದಾನ ಮಾಡ ಬೇಕೆಂಬ ನಿಯಮವೇನಿಲ್ಲ! ನಮ್ಮ ಸಂಸ್ಕೃತಿಯಲ್ಲಿ ಹೋಮ-ಹವನಗಳ ಮಹತ್ವವೇನು..?ಏನಕ್ಕಾಗಿ ಅವುಗಳನ್ನು ಮಾಡ ಬೇಕೆಂದು ಅಗತ್ಯ ದಾಖಲೆಗಳನ್ನು ನೀಡಿ ಸವಿವರವಾದ ಈ ಲೇಖನವನ್ನು ಓದಿ.

ವೇದವೆಂದರೆ ಜ್ಞಾನ. ವೇದಗಳನ್ನು ನಮ್ಮ ಸಂಸ್ಕೃತಿಯ ಆಧಾರವೆಂದು ಪರಿಗಣಿಸಿದವರು ನಾವು. ನಮ್ಮ ಆಚರಣೆ-ವಿಚಾರದಲ್ಲಿ ಏನಾದರೂ ಅನುಮಾನ ಬಂದರೆ *"ವೇದವಾಕ್ಯಂ ಪ್ರಮಾಣಂ"* ಎಂದು ಒಪ್ಪಿ ಕೊಳ್ಳುವವರು. ವೇದವಾಕ್ಯವೆಂದರೆ ಅದು ಸರ್ವೋಚ್ಛ ನ್ಯಾಯಾಲಯದ ತೀರ್ಪು. ಅದನ್ನು ಪ್ರಶ್ನಿಸುವ ಅಧಿಕಾರ ಯಾರಿಗೂ ಇಲ್ಲ. ವೇದಗಳು ಹೋಮ-ಹವನಗಳ ಮಹತ್ವವನ್ನು ಹೀಗೆ ತಿಳಿಸುತ್ತವೆ. *"ಅಗ್ನಿಮೀಳೆ ಪುರೋಹಿತಂ ಯಜ್ಞಸ್ಯ ದೇವಮೃತ್ವಿಜಂ ಹೋತಾರಂ ರತ್ನಧಾತಮಮ್"* *"ಯಜ್ಞೋ ಹಿ ಶ್ರೇಷ್ಟತಮಂ ಕರ್ಮ"* *"ಅಗ್ನಿಂ ದೂತಂ ಪುರೋ ದಧೇ ಹವ್ಯವಾಹಮುಪ ಬ್ರುಹೇ"* *"ಪ್ರಾತಃ ಪ್ರಾತಃ ಗೃಹಪತಿರ್ನೋ ಅಗ್ನಿಃ, ಸಾಯಂ ಸಾಯಂ ಸೌಮನಸ್ಯ ದಾತಾ,"* *"ತಂ ಯಜ್ಞಂ ಬರ್ಹಿಷಿಃ ಪ್ರೌಕ್ಷನ್ ಪುರುಷಂ ಜಾತಮಗ್ರತಃ"* ನೆನಪಿಡಿ. ಇವು ಕೇವಲ ಉದಾಹರಣೆಗಳು. ಹುಡುಕುತ್ತಾ ಹೋದರೆ ನಮ್ಮ ವೇದಗಳಲ್ಲಿ ಇಂತಹ ಸಾವಿರಾರು ಯಜ್ಞಕ್ಕೆ ಸಂಬಂಧಿಸಿದ ಉದಾಹರಣೆಗಳು ಸಿಗ ಬಹುದು.

“ಈ ಪ್ರಪಂಚವನ್ನು ಸೃಷ್ಟಿಸಿ ಭಗವಂತ ಯಜ್ಞವನ್ನು ಪ್ರಾರಂಭಿಸಿದನಂತೆ, ಹಾಗೇ ನಾನೂ ಸಹ ಯಜ್ಞ ಮಾಡುತ್ತೇನೆ". "ಈ ಯಜ್ಞಗಳಿಂದ ಸಂಪತ್ತು ಸಿಗುತ್ತದೆ. ಹಾಗಾಗಿ ಯಜ್ಞಗಳನ್ನು ತಪ್ಪದೇ ಮಾಡು". "ನಾನು ಯಜ್ಞಕುಂಡದಲ್ಲಿ ನನ್ನೆಲ್ಲಾ ಪಾಪ-ದುಃಖಗಳನ್ನು ಸಮರ್ಪಿಸುತ್ತಿದ್ದೇನೆ". "ಈ ಅಗ್ನಿಯ ಜ್ವಾಲೆಯಂತೇ ನನ್ನ ಯಶಸ್ಸು ಉನ್ನತ ಸ್ಥಾನಕ್ಕೇರುತ್ತಿರಲಿ," "ಹೇ ಅಗ್ನಿ ! ಜಗತ್ತಿನಲ್ಲಿರುವ ಎಲ್ಲಾ ರೋಗಗಳನ್ನು ನಿವಾರಿಸು" ಹೀಗೆ ಯಜ್ಞ-ಅಗ್ನಿಗಳನ್ನು ಪ್ರಾರ್ಥಿಸಿ ಕೊಳ್ಳುವ ಅನೇಕ ಉದಾಹರಣೆಗಳು ವೇದಗಳಲ್ಲಿವೆ.

ಆದ್ದರಿಂದ ಜನ್ಮದಿನ, ವ್ಯವಹಾರ ಪ್ರಾರಂಭೋತ್ಸವ, ಮದುವೆ, ಮುಂಜಿ, ದುಃಖದಲ್ಲಿ, ಖುಷಿಯಲ್ಲಿ ಆಜೀವ ಪರ್ಯಂತ ಹೋಮವನ್ನು ಆಚರಿಸುತ್ತಲೇ ಇರುತ್ತೇವೆ. ಯಜ್ಞವನ್ನು ಮಾಡುವುದರಿಂದ ಭಗವಂತನ ಸನ್ನಿಧಿ ಪ್ರಾಪ್ತಿಯಾಗುತ್ತದೆ. ಪಾಪಕರ್ಮಗಳು ದೂರವಾಗುತ್ತವೆ ಎಂದು ನಂಬಿದ್ದೇವೆ. ಹೋಮ ಮಾಡುವಾಗಿನ ಭಕ್ತಿ, ಶ್ರದ್ಧೆಗಳಿಂದ ಮನುಷ್ಯನ ಮನಸ್ಸು ಶಾಂತವಾಗುತ್ತದೆ. ಪರಮಾತ್ಮನಲ್ಲಿ ವಿಲೀನಗೊಳ್ಳುತ್ತದೆ. ಈ ಮನಶ್ಶಾಂತಿ ಮನಸ್ಸಿನ ಅನೇಕ ಒತ್ತಡಗಳನ್ನು ಕಡಿಮೆ ಮಾಡುತ್ತದೆ. ಈ ನಂಬಿಕೆಗಳಿಗೆ ವೇದಗಳು ಪುಷ್ಟೀಕರಣ ನೀಡಿವೆ. ವೇದವಾಕ್ಯವನ್ನು ಪಾಲಿಸುವುದು ನಮ್ಮ ಕರ್ತವ್ಯ. ಕೇವಲ ಹೋಮ ಮಾಡಿಸಿದ ಯಜಮಾನನಿಗಷ್ಟೇ ಹೋಮದ ಫಲ ಸಿಗುವುದಿಲ್ಲ. ಪ್ರಕೃತಿಗೂ ಹೋಮದ ಫಲ ಸಿಗುತ್ತದೆ. ಹೇಗೆಂದು ಕೇಳುತ್ತೀರ? ಹವನದಲ್ಲಿ ಉಪಯೋಗಿಸುವ ಸಾಮಗ್ರಿಗಳು (ಇವು ಶುದ್ಧವಾಗಿ, ಪ್ರಕೃತಿದತ್ತವಾಗಿರ ಬೇಕು) ಅಗ್ನಿಯಲ್ಲಿ ಆಹುತಿ ಬಿದ್ದು ಅದರಿಂದ ಬರುವ ಧೂಮ (ಹೊಗೆ) ಸರ್ವತ್ರ ವ್ಯಾಪಕವಾಗುತ್ತದೆ. ಈ ಧೂಮದಲ್ಲಿ ಅನೇಕ ಔಷಧೀಯ ಗುಣಗಳಿರುತ್ತವೆ. ಪ್ರಕೃತಿಯಲ್ಲಿರುವ ರೋಗವನ್ನು ಹಬ್ಬಿಸುವ ವಿಷಾಣುಗಳನ್ನು ಇವು ನಾಶ ಪಡಿಸುತ್ತವೆ. ಇದು ವೈಜ್ಞಾನಿಕ ಸಂಶೋಧನೆಗಳಿಂದ ಸಾಬೀತು ಪಟ್ಟಿದೆ.

ವಿಶ್ವ ಸ್ವಾಸ್ಥ್ಯ ಸಂಘಟನೆಯ (WHO) ಪ್ರಕಾರ ಪ್ರತಿವರ್ಷ ವಿಶ್ವದಲ್ಲಿ ಸಂಭವಿಸುವ ೫೭ ಮಿಲಿಯನ್ ಸಾವುಗಳಲ್ಲಿ ಶೇಕಡ ೨೫ ಸಾವುಗಳಿಗೆ ಇಂತಹ ಬ್ಯಾಕ್ಟೀರಿಯಾಗಳೇ ಕಾರಣ. ಒಂದು ವಿಷಯ ನೆನಪಿಡಿ.

ಹೋಮದಲ್ಲಿ ಬಳಸುವ ಪ್ರತಿವಸ್ತುವೂ ಪರಿಶುದ್ಧ ಹಾಗೂ ಪ್ರಾಕೃತಿಕವಾಗಿರ ಬೇಕು. ಯಾವುದೇ ರಾಸಾಯನಿಕ ಪದಾರ್ಥಗಳನ್ನು ಬಳಸಿರ ಬಾರದು. ಆಗಲೇ ಹೋಮದ ಪರಿಣಾಮ ಚೆನ್ನಾಗಿರುತ್ತದೆ. ಹೋಮ-ಹವನಗಳಿಂದ ಅನೇಕ ರೋಗರುಜಿನಗಳೂ ನಿಯಂತ್ರಣಕ್ಕೆ ಬರುತ್ತವೆ ಎಂದು ವೈಜ್ಞಾನಿಕ ಸಂಶೋಧನೆಗಳು ಸಾಬೀತು ಪಡಿಸಿವೆ.

೧. ಶೀತ ಹಾಗೂ ತಲೆನೋವು
೨. ಟಿ.ಬಿ (ಕ್ಷಯರೋಗ)
೩. ಮಾನಸಿಕ ಒತ್ತಡ ಹಾಗೂ ಖಿನ್ನತೆ
೪. ಚರ್ಮ ಸಂಬಂಧಿ ಕಾಯಿಲೆಗಳು
೫. ಮೂತ್ರ ಸಂಬಂಧಿ ರೋಗಗಳು
೬. ಶ್ವಾಸ ಸಂಬಂಧಿ ರೋಗಗಳು, ಅಸ್ತಮಾ ಇತರೆ

೭. ಕೆಲವು ಅಲರ್ಜಿ ಸಮಸ್ಯೆಗಳು ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇನ್ನೂ ಒಂದು ಅಚ್ಚರಿಯೇನೆಂದರೆ ಸುಮಾರು ನೂರಕ್ಕೂ ಹೆಚ್ಚಿನ ರೋಗಗಳನ್ನು "ಯಜ್ಞ ಥೆರಪಿ" ಎಂಬ ವೈದ್ಯಕೀಯ ವಿಧಾನದಿಂದ ಗುಣ ಪಡಿಸ ಬಹುದೆಂದು ವೈಜ್ಞಾನಿಕ ಸಂಶೋಧನೆಗಳು ತಿಳಿಸಿವೆ. "ಯಜ್ಞ ಥೆರಪಿ" ಎಂಬ ಹೊಸ ವಿಧಾನ ಪಾಶ್ಚಾತ್ಯ ದೇಶಗಳಲ್ಲಿ ಬೆಳೆಯುತ್ತಿದೆ. ಭಾರತೀಯರಾದ ನಾವು ಹೆಮ್ಮೆ ಪಡುವಂತಹ ವಿಷಯವಿದು. ಇಂತಹ ಚಮತ್ಕಾರಕ, ರೋಗನಾಶಕ, ಬಲವರ್ಧಕ ಅನ್ವೇಷಣೆ ನಮ್ಮ ಪೂರ್ವಜರದ್ದು. ಹೋಮ-ಹವನಗಳನ್ನು ಪ್ರತಿಪಾದಿಸಿದ್ದು ನಮ್ಮ ವೇದಗಳು. ಈ ಸಂಸ್ಕೃತಿಯನ್ನು ಉಳಿಸಿ, ಬೆಳೆಸಿ ಕೊಂಡು ಹೋಗ ಬೇಕಾದದ್ದು ನಮ್ಮ ಪರಮ ಕರ್ತವ್ಯ.

ಯಜ್ಞ-ಹೋಮಗಳು ಪುರೋಹಿತರು ಉದರ ಪೋಷಣೆಗಾಗಿ ಮಾಡಿ ಕೊಂಡಿದ್ದು ಎಂಬ ಮನೋಭಾವ ಬದಲಾಗಲಿ.

ನಮ್ಮ ಸಂಸ್ಕೃತಿ, ಆಚರಣೆಯ ಬಗ್ಗೆ ಅಭಿಮಾನವಿರಲಿ. ನಮ್ಮ ಸನಾತನ ಆಚರಣೆಗಳನ್ನು ಪರಿಪಾಲಿಸುವ, ಪೋಷಿಸುವ ಕಾಯಕ ನಮ್ಮದಾಗಲಿ.

ಲೋಕಾಃ ಸಮಸ್ತಾಃ ಸುಖಿನೋ ಭವಂತು.