Saturday 4 March 2017

Best Music Director in Kannada

ಮಹಾನ್ ಸಂಗೀತ ನಿರ್ದೇಶಕ ವಿಜಯಭಾಸ್ಕರ್ 

ಮಾರ್ಚ್ 3, ಕನ್ನಡದ ಶ್ರೇಷ್ಠ ಸಂಗೀತ ನಿರ್ದೇಶಕ ವಿಜಯಭಾಸ್ಕರ್ ಅವರ ಸ್ಮರಣೆಯ ದಿನ.  ಅವರು ಹುಟ್ಟಿದ್ದು 1925ರ ವರ್ಷದಲ್ಲಿ ನಿಧನರಾದದ್ದು ಮಾರ್ಚ್ 3, 2002ರ ವರ್ಷದಲ್ಲಿ.  ‘ಮೂಡಲ ಮನೆಯ ಮುತ್ತಿನ ನೀರಿನ’, ‘ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ’, ‘ಬೆಳ್ಳಿ ಮೋಡದ ಅಂಚಿನಿಂದ ಮೂಡಿಬಂದ ಮಿನುಗುತಾರೆ’, ‘ಹಾಡೊಂದ ಹಾಡುವೆ ನೀ ಕೇಳೋ ಮಗುವೆ’, 'ನಿನ್ನೊಲುಮೆ ನಮಗಿರಲಿ ತಂದೆ',    ‘ಹಾವಿನ ದ್ವೇಷ ಹನ್ನೆರಡು ವರುಷ’, ‘ಭಾವವೆಂಬ ಹೂವು ಅರಳಿ’, ‘ವೇದಾಂತಿ ಹೇಳಿದನು’, ‘ದೇವ ಮಂದಿರದಲ್ಲಿ ದೇವರು ಕಾಣಲೆ ಇಲ್ಲ’, ‘ಎಲ್ಲೆಲ್ಲೂ ಸಂಗೀತವೇ’, 'ವಸಂತ ಬರೆದನು ಒಲವಿನ ಓಲೆ', 'ಗಗನವು ಎಲ್ಲೋ ಭೂಮಿಯು ಎಲ್ಲೋ' ಹೀಗೆ ಹಾಡುಗಳನ್ನು ನೆನೆದಾಗಲೆಲ್ಲಾ ನಮಗೆ ಕಾಣುವುದು ಅದರ ಹಿಂದಿನ ಶ್ರೇಷ್ಠ ಕೆಲಸದ ವಿಜಯಭಾಸ್ಕರ್.

ವಿಜಯಭಾಸ್ಕರ್ ನೌಷಾದ್, ಮದನ್ ಮೋಹನ್ ಅವರಂತಹ ಶ್ರೇಷ್ಠ ಸಂಗೀತ ನಿರ್ದೇಶಕರ  ಸಹಾಯಕರಾಗಿ ಮುಂಬೈನಲ್ಲಿ ಕೈತುಂಬಾ ಕೆಲಸ ಹೊತ್ತು ಹಿಂದಿ ಚಿತ್ರರಂಗದಲ್ಲಿ ಮುಳುಗಿ ಹೋಗಿದ್ದರು.  ಒಮ್ಮೆ ಮುಂಬೈನ ಮಾತುಂಗ ಹೋಟೆಲಿನಲ್ಲಿ ಕಾಫಿ ಕುಡಿಯುತ್ತಾ ತಮ್ಮ ಗೆಳೆಯರೊಂದಿಗೆ ಹರಟುತ್ತಿದ್ದಾಗ ಈ ಗೆಳೆಯರ ನಡುವಿನ  ಕನ್ನಡದ ಸಂಭಾಷಣೆ ಕೇಳಿದ ಬಿ.ಆರ್. ಕೃಷ್ಣಮೂರ್ತಿ ಅವರು ತಮ್ಮ ಪರಿಚಯ ಹೇಳಿಕೊಂಡು ಜೊತೆ ಸೇರಿದರು.  ಮಾತು ಮುಂದುವರೆದು, ಕೃಷ್ಣಮೂರ್ತಿಯವರು ಆರ್. ನಾಗೇಂದ್ರರಾಯರ ಶ್ರೀರಾಮಪೂಜಾ ಚಿತ್ರಕ್ಕೆ ಸಂಗೀತ ನೀಡಲು ವಿಜಯಭಾಸ್ಕರ್ ಅವರನ್ನು ಆಹ್ವಾನಿಸಿದರು.  ಹೀಗೆ ವಿಜಯಭಾಸ್ಕರ್ ಬೆಂಗಳೂರಿಗೆ ಬಂದಿಳಿದರು.

ಬಿ. ಆರ್ ಪಂತುಲು ಅವರ ಸಹಾಕರಾಗಿದ್ದ ಪುಟ್ಟಣ್ಣ ಕಣಗಾಲರು ಬೆಳ್ಳಿಮೋಡ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾದಾಗ ಅವರ ಜೊತೆಗೂಡಿ ಶ್ರೇಷ್ಠ ಸಂಗೀತ ನೀಡಿದವರು ವಿಜಯಭಾಸ್ಕರ್.  ಬೆಳ್ಳಿಮೋಡ ಚಿತ್ರದ ಗೀತೆಗಳು ಕನ್ನಡ ಸಿನಿಮಾರಂಗದ ಶ್ರೇಷ್ಠ ಹಾಡುಗಳ ಸಾಲಿನಲ್ಲಿ ಎಂದೆಂದೂ ವಿರಾಜಮಾನವಾದದ್ದು.  ದ. ರಾ. ಬೇಂದ್ರೆಯವರ  ‘ಮೂಡಲಮನೆಯ ಮುತ್ತಿನ ನೀರಿನ’ ಅಂತೂ ಶ್ರೇಷ್ಠ ಚಿತ್ರಗೀತೆಗಳ ಸಾಲಿನಲ್ಲಿ ಚಿರವಿರಾಜಮಾನವಾದದ್ದು.  ಅದೇ ರೀತಿ ‘ಶರಪಂಜರ’ದ  ಬೇಂದ್ರೆಯವರ ‘ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ' ಕೂಡ.  ಮಾನಸ ಸರೋವರದಲ್ಲಿ ಜಿ.ಎಸ್.ಎಸ್ ಅವರ  ‘ವೇದಾಂತಿ ಹೇಳಿದನು’ ಕೂಡಾ ಸ್ಮರಣೀಯವಾದದ್ದು.   ಪುಟ್ಟಣ್ಣ ಮತ್ತು ವಿಜಯಭಾಸ್ಕರ್ ಅವರ ‘ಬೆಳ್ಳಿಮೋಡ’ದ ಜೊತೆಗೂಡುವಿಕೆ ಮುಂದೆ ಗೆಜ್ಜೆಪೂಜೆ, ಶರಪಂಜರ, ಸಾಕ್ಷಾತ್ಕಾರ, ನಾಗರಹಾವು. ಉಪಾಸನೆ, ಶುಭಮಂಗಳ, ಕಥಾಸಂಗಮ  ಮುಂತಾದ ಅವಿಸ್ಮರಣೀಯ ಚಿತ್ರಗಳನ್ನು ತಂದಿತು.

ಪುಟ್ಟಣ್ಣನವರ ಚಿತ್ರಗಗಳಿಗೆ ಮುಂಚಿತವಾಗಿ  ಕೂಡಾ ವಿಜಯಭಾಸ್ಕರ್ ಮನಮೆಚ್ಚಿದ ಮಡದಿ, ಸಂತ ತುಕಾರಾಂ, ರಾಣಿ ಹೊನ್ನಮ್ಮ ಮುಂತಾದ ಚಿತ್ರಗಳಲ್ಲಿ ಅಪಾರ ಜನಪ್ರಿಯರಾಗಿದ್ದರು.  ಭಾರತದ ಶ್ರೇಷ್ಠ ಚಿತ್ರ ನಿರ್ದೇಶಕರಲ್ಲಿ ಒಬ್ಬರೆನಿಸಿರುವ ಮಲಯಾಳದ ಅಡೂರು ಗೋಪಾಲಕೃಷ್ಣನ್ ಅವರ ಎಲ್ಲಾ ಚಿತ್ರಗಳಿಗೂ ವಿಜಯಭಾಸ್ಕರ್ ಅವರೇ ಸಂಗೀತ ನಿರ್ದೇಶಕರು.  ಕಲಾತ್ಮಕ ಚಿತ್ರಗಳ ಸಾಲಿನಲ್ಲಿ ಪ್ರತಿಷ್ಟಿತವೆನಿಸಿರುವ ಎನ್ ಲಕ್ಷ್ಮೀನಾರಾಯಣರ ‘ನಾಂದಿ’,  ಲಂಕೇಶರ ‘ಎಲ್ಲಿಂದಲೋ ಬಂದವರು’, ನಾಗಾಭರಣರ ‘ಗ್ರಹಣ’, ‘ನೀಲ’ ಚಿತ್ರಗಳಲ್ಲಿ ಕೂಡಾ ವಿಜಯಭಾಸ್ಕರ್ ಅವರ ಸಂಗೀತ ಅಪಾರವಾದ ಜನಪ್ರಿಯತೆ ಪಡೆದಿದೆ.  ಹಿಂದಿಯಲ್ಲಿ ಜಿ.ವಿ. ಅಯ್ಯರ್ ಅವರ ವಿವೇಕಾನಂದ ಚಿತ್ರಕ್ಕೆ ಕೊಡಾ ಅವರ ಸಂಗೀತ ಸಂದಿದೆ.  ಹೀಗೆ ವಿಜಯಭಾಸ್ಕರ್ ಸುಮಾರು 600ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ನೀಡಿದರು.  ರಾಬರ್ಟ್ ಕ್ಲೈವ್ ಎಂಬ ಇಂಗ್ಲೀಷ್ ಚಿತ್ರದ ಸಂಗೀತ ನಿರ್ದೇಶನಕ್ಕೆ ಇಂಗ್ಲೆಂಡಿಗೆ ಹೋಗಿ ಬಂದರು.  ತಮಿಳು, ತೆಲುಗು, ಮಲಯಾಳಂ, ತುಳು, ಕೊಂಕಣಿ, ಮರಾಠಿ ಚಿತ್ರಗಳಿಗೂ ಅವರು ಸಂಗೀತ ನೀಡಿದ್ದಾರೆ.  

ಸಂಗೀತ ಪ್ರಧಾನವಾದ ‘ಮಲಯಮಾರುತ’ ಚಿತ್ರದ ಸಂಗೀತ ವಿಜಯಭಾಸ್ಕರ್ ಅವರಿಗೆ ಸಂಗೀತ ಲೋಕದಲ್ಲಿ ಪ್ರತಿಷ್ಠಿತವೆನಿಸಿರುವ  ‘ಸುರಸಿಂಗಾರ್’ ಪ್ರಶಸ್ತಿ ತಂದಿತು.  ವಿಭಿನ್ನ ಪ್ರತಿಭೆಗಳ ಸಾಲಿನಲ್ಲಿ ಸೇರುವ ಕೆ.ಎಸ್.ಎಲ್. ಸ್ವಾಮಿ, ಕಸ್ತೂರಿ ಶಂಕರ್, ಬಿ. ಆರ್. ಛಾಯಾ, ಸುದರ್ಶನ್, ವಿಷ್ಣುವರ್ಧನ್ ಅವರ ಧ್ವನಿಯನ್ನು ಹಿನ್ನಲೆಗಾಯನಕ್ಕೆ ವಿಜಯಭಾಸ್ಕರ್ ಅವರು ಅಳವಡಿಸಿದ ರೀತಿ ಕೂಡಾ ವಿಶಿಷ್ಟವಾದದ್ದು.  ಕೆ.ಎಸ್.ಎಲ್ ಸ್ವಾಮಿ ಅವರ  ‘ಸೂರ್ಯಂಗೂ ಚಂದ್ರಂಗೂ’, ‘ಕಸ್ತೂರಿ ಶಂಕರ್’ ಅವರ ‘ಯಾವ ತಾಯಿಯು ಹಡೆದ ಮಗಳಾದರೇನು’, ಬಿ.ಆರ್. ಛಾಯಾ ಧ್ವನಿಯಲ್ಲಿ ‘ಹಿಂದೂಸ್ಥಾನವು ಎಂದೂ ಮರೆಯದ’, ಸುದರ್ಶನ್ ಧ್ವನಿಯಲ್ಲಿ ‘ಹೂವೊಂದು ಬಳಿ ಬಂದು’, ವಿಷ್ಣುವರ್ಧನ್ ಅವರ ಧ್ವನಿಯಲ್ಲಿ ‘ತುತ್ತು ಅನ್ನ ತಿನ್ನೋಕೆ’ ಹೀಗೆ ಪ್ರತಿಯೊಂದು ಧ್ವನಿಯನ್ನೂ ಹೇಗೆ ತನ್ನದೇ ಆದ ರೀತಿಯಲ್ಲಿ ಸಿನಿಮಾ ಸಂಗೀತಕ್ಕೆ ಉತ್ತಮ ರೀತಿಯಲ್ಲಿ ಬಳಸಬಹುದೆಂಬುದಕ್ಕೆ ವಿಜಯಭಾಸ್ಕರ್ ಶ್ರೇಷ್ಠ ನಿದರ್ಶನ.

ಹೀಗೆ ತಮ್ಮ ಸಂಗೀತ ಸಾಧನೆಗಳಿಂದ ಅಮರರಾದ ವಿಜಯಭಾಸ್ಕರ್ ತಮ್ಮ 77 ವರ್ಷಗಳ ಬದುಕನ್ನು ನಡೆಸಿ ತಮ್ಮ ಬೆಂಗಳೂರು ನಿವಾಸದಲ್ಲಿ 2002ರ ವರ್ಷದಲ್ಲಿ ನಿಧನರಾದರು.  ಈ ಮಹಾನ್ ಸಾಧಕರ ಆತ್ಮಕ್ಕೆ ನಮ್ಮ ಸ್ಮರಣೀಯ ನಮನ.

ಚಿತ್ರ ವಿವರ :  'ನಾಗರಹಾವು' ಚಿತ್ರದ ಧ್ವನಿಮುದ್ರಣ ಸಂದರ್ಭದಲ್ಲಿ ಗಾಯಕಿ ಪಿ. ಸುಶೀಲ, ನಟ ವಿಷ್ಣುವರ್ಧನ್,  ಗಾಯಕ ಪಿ. ಬಿ. ಶ್ರೀನಿವಾಸ್,  ನಿರ್ಮಾಪಕ ಎನ್.  ವೀರಸ್ವಾಮಿ,  ನಿರ್ದೇಶಕ ಎಸ್. ಆರ್.  ಪುಟ್ಟಣ್ಣ ಕಣಗಾಲ್ ಅವರೊಂದಿಗೆ ವಿಜಯಭಾಸ್ಕರ್.  ಚಿತ್ರಕೃಪೆ:  ದಿ ಹಿಂದೂ  ಪತ್ರಿಕೆ.

Friday 3 March 2017

ಹೇಳ್ಕೊಳ್ಳಕ್ ಒಂದೂರು ...

ಹೇಳ್ಕೊಳ್ಳಕ್ ಒಂದೂರು ...

- ಜಿ. ಪಿ. ರಾಜರತ್ನಂ

ಹೇಳ್ಕೊಳ್ಳಕ್ ಒಂದೂರು
ತಲ್ ಮ್ಯಾಗೆ ಒಂದ್ಸೂರು
ಮಲ್ಗಕ್ಕೆ ಭೂಮ್ ತಾಯಿ ಮಂಚ
ಕೈ ಹಿಡ್ದೊಳ್ ಪುಟ್ನಂಜಿ
ನಗನಗ್ತಾ ಉಪ್ಪ್ ಗಂಜಿ
ಕೊಟ್ರಾಯ್ತು ರತ್ನನ್ ಪರ್ಪಂಚ ||

ಹಗಲೆಲ್ಲ ಬೆವರ್ ಹರ್ಸಿ
ತಂದಿದ್ರಲ್ ಒಸಿ ಮುರ್ಸಿ
ಸಂಜೆಲಿ ಹುಳಿ ಹೆಂಡ ಕೊಂಚ
ಹೀರ್ತ ಮೈ ಝುಂ ಅಂದ್ರೆ
ವಾಸನೆ ಘಂ ಘಂ ಅಂದ್ರೆ
ತುಂಬ್ ಹೋಯ್ತು ರತ್ನನ್ ಪರ್ಪಂಚ

ಏನೋ ಖುಸಿಯಾದಾಗ
ಮತ್ ಹೆಚ್ಚ್ ಹೋದಾಗ
ಹಂಗೇನೆ ಪರ್ಪಂಚದಂಚ
ದಾಟ್ಕಂಡಿ ಹಾರಾಡ್ತಾ
ಕನ್ನಡದಲ್ ಪದವಾಡ್ತಾ
ಹಿಗ್ಗೋದೆ ರತ್ನನ್ ಪರ್ಪಂಚ

ದುಃಖ್ ಇಲ್ಲ ದಾಲ್ ಇಲ್ಲ
ನಮ್ಗದ್ರಾಗ್ ಪಾಲಿಲ್ಲ
ನಾವ್ ಕಂಡಿದ್ ನಾಲ್ಕ್ಅಂಚವಂಚ
ನಮ್ಮಷ್ಟಕ್ ನಾವಾಗಿ
ಇದ್ದಿದ್ರಲ್ ಹಾಯಾಗಿ
ಬಾಳೋದೆ ರತ್ನನ್ ಪರ್ಪಂಚ

ಬಡ್ತನ ಗಿಡ್ತನ ಏನಿದ್ರೇನು
ನಡತೇನ ಚೆನ್ನಾಗಿಟ್ಕೋಳೋದೆ ಅಚ್ಛಾ
ಅಂದ್ಕೊಂಡಿದ್ ಸುಖವಾಗಿ
ಕಷ್ಟಕ್ಕೆ ನಗುಮುಖವಾಗಿ
ನಡೆಯೋದೆ ರತ್ನನ್ ಪರ್ಪಂಚ

ದೇವ್ರೇನ್ರ  ಕೊಡಲಣ್ಣ
ಕೊಡ್ದಿದ್ರೆ ಬುಡಲಣ್ಣ
ನಾವೆಲ್ಲ ಅವನೀಗೆ ಬಚ್ಚಾ
ಅವನ್ ಹಾಕಿದ್ ತಾಳ್ದಂಗೆ
ಕಣ್ ಮುಚ್ಕೊಂಡ್ ಯೋಳ್ದಂಗೆ
ಕುಣಿಯೋದೆ ರತ್ನನ್ ಪರ್ಪಂಚ 

ಹಾಗೆ ಸುಮ್ಮನೆ

ಮಾಯವಾಗಿದೆ ಮನಸು ಹಾಗೆ ಸುಮ್ಮನೆ
ಗಾಯವ ಮಾಡಿದೆ ಕನಸು ಹಾಗೆ ಸುಮ್ಮನೆ
ಮೋಹದಲ್ಲಿ ಬೀಳುವ ಮಧುರವಾದ ಭಾವನೆ
ಈಗ ತಾನೆ ಬಂದಿದೆ ನೀಡದೆ ಸೂಚನೆ
ಮಾಯವಾಗಿದೆ ಮನಸು ಹಾಗೆ ಸುಮ್ಮನೆ
ಗಾಯವ ಮಾಡಿದೆ ಕನಸು ಹಾಗೆ ಸುಮ್ಮನೆ
ಮೋಹದಲ್ಲಿ ಬೀಳುವ ಮಧುರವಾದ ಭಾವನೆ
ಈಗ ತಾನೆ ಬಂದಿದೆ ನೀಡದೆ ಸೂಚನೆ

ತುಂಬೀ ಹೋಯಿತೀಗಲೇ ನನ್ನ ದಿನಚರಿ
ಎಲ್ಲಾ ಪುಟದಲು ಅವಳದೇ ವೈಖರಿ
ಅವಳ ನಿಲುವು ಗನ್ನಡಿ ಪುಣ್ಯ ಮಾಡಿದೆ
ರೂಪ ತಾಳಿ ನಿಂತಿದೆ ನನ್ನದೇ ಕಲ್ಪನೆ

ಮಾಯವಾಗಿದೆ ಮನಸು ಹಾಗೆ ಸುಮ್ಮನೆ
ಗಾಯವ ಮಾಡಿದೆ ಕನಸು ಹಾಗೆ ಸುಮ್ಮನೆ
ಮೋಹದಲ್ಲಿ ಬೀಳುವ ಮಧುರವಾದ ಭಾವನೆ
ಈಗ ತಾನೆ ಬಂದಿದೆ ನೀಡದೆ ಸೂಚನೆ

ನನ್ನ ಹಾಡಿನಲ್ಲಿದೆ ಅವಳ ಸಂಗತಿ
ಜಾಹೀರಾಗಲಿ ಜೀವದಾ ಮಾಹಿತಿ
ಎಲ್ಲೇ ಹೊರಟು ನಿಂತರು ಅಲ್ಲೆ ತಲುಪುವೆ
ಜಾಸ್ತಿ ಹೇಳಲಾರೆನು ಖಾಸಗಿ ಯೋಚನೆ

ಮಾಯವಾಗಿದೆ ಮನಸು ಹಾಗೆ ಸುಮ್ಮನೆ
ಗಾಯವ ಮಾಡಿದೆ ಕನಸು ಹಾಗೆ ಸುಮ್ಮನೆ
ಮೋಹದಲ್ಲಿ ಬೀಳುವ ಮಧುರವಾದ ಭಾವನೆ
ಈಗ ತಾನೆ ಬಂದಿದೆ ನೀಡದೆ ಸೂಚನೆ